ಮರಳಿ ಗೂಡಿಗೆ
by Deepak Basrur
ಲಿಫ್ಟ್ನಲ್ಲಿ UB ಅಂತ ಒತ್ತಿ ಲಿಫ್ಟ್ನಿಂದ ಆಚೆ ಬಂದವ್ನಿಗೆ ಬೈಕ್ ಎಲ್ಲಿಟ್ಟಿದೀನಿ ಅಂತಾನೆ ನೆನಪ್ ಹೋಗಿತ್ತು. ಮುಂಚೆ ಎಲ್ಲಾ UB ನಲ್ಲಿ ಇಟ್ಟಿದೀನ ಇಲ್ಲ LB ನ ಅಂತ ಡೌಟ್ ಇರ್ತಾ ಇದ್ದವನಿಗೆ ಇವತ್ತು UB ಅಂತ ನೆನಪಿತ್ತು. ಸರಿ, ಬೆಳಿಗ್ಗೆ ಬರುವಾಗ ಏನೆಲ್ಲಾ ಆಯ್ತು ಅಂತ ರೀ ಕ್ರಿಯೇಟ್ ಮಾಡಣ ಅಂತ ನಿಂತ್ಕೊಂಡೆ. ನನ್ನ ಎಡಭಾಗದಲ್ಲಿದ್ದ ಎಂಟ್ರೆನ್ಸ್ ನಿಂದ ಬಂದವ್ನು ಇನ್ನೇನ್ ರೈಟ್ ಹೊಡೀಬೇಕು ಅಂತ ಇದ್ದಾಗ ಸ್ವಲ್ಪ. ಮುಂದೆ ದೂರ ಇದ್ದ ಸೆಕ್ಯುರಿಟಿ ಹುಡುಗಿ ಸೀಟಿ ಹೊಡೆದು ಕರೆದಿದ್ದು, ಅವಳನ್ನೇ ನೋಡ್ತಾ ಇವಳಿಗೆ ಈ ಸಣ್ಣ ಮೂಗುತಿಗಿಂತ ,ರಿಂಗ್ ಮೂಗುತಿ ಚೆನ್ನಾಗಿರುತ್ತೆ ಅಂದ್ಕೊತ ಗಾಡಿನ ಅದ್ಯಾವ್ದೋ ಮೂಲೆಯಲ್ಲಿ ನಿಲ್ಸಿದ್ದು ನೆನಪಾಯ್ತು. ನೋಡಿದ್ರೆ ಆ ಮೂಲೆಯಲ್ಲೇ ಗಾಡಿ ನನ್ನನ್ನ ಕೈ ಬೀಸಿ ಕರಿತ ಇತ್ತು. ಪಾಪ ಕಾಲಿದ್ದಿದ್ರೆ ಅದೇ ಒಡ್ಕೊಂಡ್ ನನ್ ಹತ್ರ ಬರ್ತಾ ಇತ್ತು ಅನ್ನಿಸ್ತು. ಎರಡ್ ನಿಮಿಷ ಆದ ಮೇಲೆ "ಅಲ್ಲ , ಕೈ ಕಾಲು ಇದ್ದಿದ್ರೆ ಅದ್ಯಾಕ್ ಗುರು ನಿನ್ ಜೊತೆ ಇರ್ತಾ ಇತ್ತು.. ಯಾವತ್ತೋ ಬಿಟ್ಟು ಹೋಗ್ತಾ ಇತ್ತು " ಅಂತ ಮನಸ್ಸು ಹೇಳಿದಾಗ , ಹಳೇ ಹುಡ್ಗಿ ನನ್ನ ಬಿಟ್ಟೋಗವಾಗ ಕೊಟ್ಟ ಕಾರಣವೆಲ್ಲ ನೆನಪಾಯ್ತು. ಒಂದಾ.. ಎರಡ... ನೂರಿಪ್ಪತ್ತು ಕಾರಣ ಮುಖಕ್ಕೆ ಎಸೆದು " ನಿಂಗ್ ಯಾವ್ದ್ ಬೇಕೋ ಅದು ತಗೊಂಡು ನನ್ನ ಪಾಡಿಗೆ ನನ್ ಬಿಟ್ಬಿಡು" ಅಂತ ಹೋಗಿದ್ಳು. ನನ್ ಲೈಫ್ ಹಿಂಗೆ. ಎಲ್ಲರೂ ಅದೇನೋ ಬಕೆಟ್ ಲಿಸ್ಟ್ ಅಂತ ಮಾಡ್ಕೊಂಡು, ಒಂದಾದ ಮೇಲೆ ಒಂದು ಟಿಕ್ ಮಾಡ್ಕೊಂಡು ಹೋದ್ರೆ, ನನ್ ಲೈಫನಲ್ಲಿ ಚೊಂಬಿನ ಲಿಸ್ಟ್ ಇದೆ. " ಓ ಇದು ಚೊಂಬ್ ಹಿಡಿತ? ಟಿಕ್ ಮಾಡು.. ಓ ಅದೂ ಚೊಂಬ್ ಹಿಡಿತ ಟಿಕ್ ಮಾಡು" ಹಿಂಗೆ.
ಗಾಡಿ ಸಿಕ್ತು. ಮುಂದಿನ ಸಮಸ್ಯೆ ಮನೆಗೆ ಯಾವ್ ಕಡೆಯಿಂದ ಹೋಗೋದು ಅಂತ. ರಿಂಗ್ ರೋಡ್ನಲ್ಲಿ ಮೆಟ್ರೋ ಅಂತ ಕ್ರಿಸ್ತ ಪೂರ್ವದಲ್ಲಿ ಶುರು ಮಾಡಿದ್ದ ಕೆಲ್ಸ ಇನ್ನೂ ಆಗಿರಲಿಲ್ಲ. ಬೆಳ್ಳಂದೂರು ಕೆರೆ ದಾರಿಯಲ್ಲಿ ಹೋಗೋಣ ಅಂದ್ರೆ ಮಳೆ ಬಂದು ಟ್ರಾಫಿಕ್ ಇರ್ಬೋದು. ಸರಿ ನಂಬಿಕಸ್ತ ಗೂಗಲ್ ಮ್ಯಾಪ್ ತೆಗೆದು ನೋಡಿದ್ರೆ ಅದು ರಿಂಗ್ ರೋಡ್ ಖಾಲಿ ಇದೆ, ಬೆಳ್ಳಂದೂರು ಕೆರೆ ಕಡೆ ದಾರಿ ಟ್ರಾಫಿಕ್ ಇದೆ ಅಂತ ತೋರಿಸ್ತು. ರಿಂಗ್ ರೋಡ್ನಲ್ ಹೋಗೋದು ಒಳ್ಳೇದು ಅಂತ ಹೇಳ್ತು. ಆದ್ರೆ ನಂಗೆ ಒಳ್ಳೆದೆಲ್ಲ ಕೆಟ್ಟದ್ದು, ಕೆಟ್ಟದ್ದೆಲ್ಲ ಒಳ್ಳೇದು ಅಂತ ನಮ್ ಭಟ್ಟರು ಹೇಳಿದ್ದಾರೆ. ಯಾವ್ ಭಟ್ರು ಅಂದ್ರೆ ಯೋಗರಾಜ್ ಭಟ್ರು. ಅದ್ಕೆ ಬೆಳ್ಳಂದೂರು ಕೆರೆ ದಾರಿ ಹಿಡಿದೆ. ಇದಕ್ಕೆಲ್ಲ ನನ್ ದೇವರ ಭಕ್ತಿನೆ ಕಾರಣ. ಅವ್ನತ್ರ ಕೈ ಮುಕ್ಕೊಂಡು, ದೇವ್ರೇ ನಂಗ್ ಅದು ಕೊಡು , ಇದು ಕೊಡು ಅಂತ ಕೇಳಲ್ಲ, ನಿಂಗ್ ಏನ್ ಅನ್ಸುತ್ತೋ ಅದನ್ನ ಕೊಡು ಅಂತ ಕೇಳ್ಕೊಂಡಾಗೆಲ್ಲಾ ದೇವರೂ ಕೊಡ್ತಾ ಇದ್ದ.. ಕೈ ನ..
ಬೈಕ್ ಕಲಿತ ಶುರುವಿನಲ್ಲಿ ಗಾಡಿ ಓಡಿಸುವಾಗ ತುಂಬಾ ಗಮನ ಕೊಡಬೇಕಿತ್ತು. ಮುಂದೆ ಎಲ್ಲೋ ಅಂಪ್ಸ್ ಬರುತ್ತೆ ಅಂತ ಗೊತ್ತಾದ್ರೆ ನಾನು ಇಲ್ಲೇ ಬ್ರೇಕ್ ಹಾಕ್ಲ, ಕ್ಲಚ್ ಒತ್ಲ, ಇಲ್ಲ ನೀಟ್ ಆಗಿ ಬೈಕ್ ಬಿಟ್ಟಿ ಹಾರ್ಕೊಂಡ್ ಬಿಡ್ಲ ಅಂತ ಇಲ್ಲೇ ಮನಸ್ಸು ಲೆಕ್ಕ ಹಾಕ್ತಾ ಇತ್ತು. ಆದರೆ ಈಗ ಹಾಗಲ್ಲ. ಮನಸ್ಸು ಎಲ್ಲೋ ಇರುತ್ತೆ, ಗಾಡಿ ಅದಾಗೆ ಹೋಗ್ತಾ ಇರುತ್ತೆ. ಹೇಗೆ ಅಂದ್ರೆ ಅಲ್ಲೆಲ್ಲೋ ದೂರದಲ್ಲಿ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ ಅಂತ ಇವ್ಳು ಹೇಳಿದ್ರೆ, ಅವ್ನು " ನಂಗೊತ್ತಿಲ್ಲ, ನೀನೇ ಬಂದು ಮನೆ ತೋರ್ಸು ಅಂತಾನೆ". ನನ್ ಒಳಮನಸ್ಸಿನ್ನಲ್ಲಿ " ಅಲ್ಲಾ ಗುರು, ಅವಳೇ ಬಂದು ಮನೆ ತೋರ್ಸೋವಂಗ್ ಇದ್ದಿದ್ರೆ ನಿನ್ ಯಾಕ್ ಗುರು ಕೇಳ್ತಾ ಇದ್ಳು. ಅವ್ಳೇ ಹೋಗಿರೋಳು " ಅಂತ ಓಡ್ತಾ ಇರುತ್ತೆ. ಎಲ್ಲಾ ಉದುರಿ ಉದುರಿ ಯೋಚನೆಗಳೇ.
ಇನ್ನ ಈ ಹಳ್ಳಗಳ ನಡುವೆ ಇರುವ ರೊಡನ್ನು ಹುಡುಕಿ ಹೋಗೋದೇ ಒಂದು ಸಾಹಸ . ಈ ಖುಷಿಗೆ ಭಾರತ ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕತೆ ಇರೋ ದೇಶ ಅಂತೆ. ಇನ್ನೇನ್. ಮೂರಕ್ ಹೋಗತ್ತಂತೆ. ಇಂತ ರೋಡಿನಲ್ಲೂ ರೇಸ್ ಬೇರೆ. ಈ ಡ್ಯೂಕ್, ಹಿಮಲಯನ್ ಅಂತ ಗಾಡಿಗಳು ಹಂಗೆ ಹೋದ್ರೆ ಬೇಜಾರ್ ಆಗಲ್ಲ. ಅದೇ ಈ ಹೆಣ್ಣು ಮಕ್ಕಳು ವಾಕಿಂಗ್ ಮಾಡೋ ರೀತಿ , ಎರಡೂ ಕಾಲನ್ನು ನೆಲದ್ ಮೇಲೆ ಇಟ್ಕೊಂಡು, ಡ್ಯಾಡೀಸ್ ಲಿಟ್ಟಲ್ ಪ್ರಿನ್ಸೆಸ್ ಅಂತ ಸ್ಕೂಟಿ ಮೇಲೆ ಹಂಗ್ ಸ್ಪೀಡಾಗಿ ಹೋಗ್ತಾರ್ ನೋಡಿ , ಅವ್ರನ್ನ ನೋಡಿದ್ ಕೂಡಲೇ ಜೀವ ಭಯದಿಂದ ಜಾಗ ಬಿಟ್ಟು ಬಿಡ್ಬೇಕು ಅನ್ಸುತ್ತೆ. ಸಿದ್ದಣ್ಣ ಹೆಣ್ ಮಕ್ಳಿಗೆ ಫ್ರೀ ಬಸ್ ಕೊಟ್ಟು ರೋಡ್ನಲ್ ಓಡಾಡೋ ಜನ ಜೀವ ಕಾಪಾಡಿದ ಅನ್ಸುತ್ತೆ. ಹಿಂಗೆ ಗಾಡಿಯಲ್ಲಿ ಹೋಗೋ ಮತ್ತು ನಾಯಿನ ವಾಕಿಂಗ್ ಕರ್ಕ್ಕೊಂಡ್ ಹೋಗ್ತಾ ಇರೋ ಹೆಣ್ ಮಕ್ಳನ್ನ ನಂಗೆ ನೋಡ್ದಾಗೆಲ್ಲ ನಂಗ್ ಅನ್ಸೋದು ಇವ್ರು ಗಾಡಿನ ಹೊಡಿಸ್ತಾ ಇದ್ದಾರಾ, ಇಲ್ಲಾ ಗಾಡಿನೆ ಇವ್ರನ್ನ ಹೊಡಿಸ್ಕೊಂಡ್ ಹೋಗ್ತಾ ಇದ್ಯಾ? ಇವ್ರು ನಾಯಿನ ವಾಕಿಂಗ್ ಕರ್ಕೊಂಡ್ ಬಂದಿದ್ದಾರ? ಇಲ್ಲಾ ನಾಯಿನೆ ಇವ್ರನ್ನ ವಾಕಿಂಗ್ ಕರ್ಕೊಂಡ್ ಹೋಗ್ತಾ ಇದ್ಯಾ ಅಂತ.
ಹೀಗೆ, ಏರಿ ಮೇಲೆ ಏರಿ,ಮೇಲೆ ಕೆಳಗೆ ಹಾರಿ ಮನೆ ಸೇರೋ ಅಷ್ಟರಲ್ಲಿ ಬೆನ್ನು ನೋವು "ನಾನ್ ಇಲ್ಲಿದಿನಿ, ನಾನ್ ಇಲ್ಲಿದಿನಿ" ಅಂತ ಇತ್ತು.
– ದೀಪಕ್ ಬಸ್ರೂರು